ರಾಮನಗರದ ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡಿಯಲ್ಲಿ “ಪಾಕಿಸ್ತಾನ ಜೈ” ಮತ್ತು “ಕನ್ನಡಿಗರು ಸೂ… ಮಕ್ಕಳು” ಎಂಬ ದೇಶ-ವಿರೋಧಿ ಹಾಗೂ ಅಪಮಾನಕಾರಿ ಬರಹಗಳು ಕಂಡು ಬಂದಿದ್ದು, ಇದರಿಂದ ಉದ್ಯೋಗಿಗಳಲ್ಲಿ ಆಕ್ರೋಶ ಉಂಟಾಗಿದೆ. ಈ ಘಟನೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಾರ್ಚ್ 15ರಂದು ಬೆಳಕಿಗೆ ಬಂದಿದೆ. ಬರಹವನ್ನು ಯಾರು, ಯಾವ ಸಂದರ್ಭದಲ್ಲಿ ಬರೆದಿದ್ದಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಕಂಪನಿಯ ನಿರ್ದೇಶನ:
ಘಟನೆಯ ಕುರಿತು ಕಂಪನಿ ತನ್ನ ಉದ್ಯೋಗಿಗಳಿಗೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು, “ಇಂತಹ ಬರವಣಿಗೆಗಳು ಸಂಸ್ಥೆಯ ಶಿಸ್ತಿಗೆ ಧಕ್ಕೆ ಉಂಟುಮಾಡುವುದರೊಂದಿಗೆ, ದೇಶದ್ರೋಹಿ ಕೃತ್ಯಗಳಾಗಿ ಪರಿಗಣಿಸಲ್ಪಡುತ್ತವೆ. ಆರೋಪಿಗಳನ್ನು ಪತ್ತೆ ಹಚ್ಚಲು ಬೆರಳಚ್ಚು ಹಾಗೂ ಬರವಣಿಗೆ ತಜ್ಞರ ನೆರವಿನೊಂದಿಗೆ ತನಿಖೆ ಕೈಗೊಳ್ಳಲಾಗುತ್ತದೆ. ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದೆ.
ಕನ್ನಡಪರ ಸಂಘಟನೆಗಳ ಆಕ್ರೋಶ:
ಘಟನೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಕಂಪನಿಯ ಮುಂಭಾಗ ಪ್ರತಿಭಟನೆ ನಡೆಸಿದವು. “ಇದು ದೇಶದ್ರೋಹಿ ಕೃತ್ಯ, ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು. ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದರೆ, ಕಂಪನಿ ಆಡಳಿತ ಮಂಡಳಿಯ ಮೇಲೂ ಕ್ರಮ ಕೈಗೊಳ್ಳಬೇಕು” ಎಂದು ಕನ್ನಡಪರ ಸಂಘಟನೆಗಳ ಮುಖಂಡ ಕನ್ನಡ ಮಂಜು ಆಗ್ರಹಿಸಿದರು.