ಲೂಯಿಸ್ (ಮಾ.13): ಹಿಂದೂ ಮಹಾಸಾಗರದಲ್ಲಿ ಕಮ್ಯುನಿಸ್ಟ್ ಚೀನಾದ ಪ್ರಭಾವವೃದ್ಧಿಯನ್ನು ನಿಯಂತ್ರಿಸಲು ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಭದ್ರತೆ ಮತ್ತು ಸುಸ್ಥಿರತೆಯನ್ನು ಒದಗಿಸುವ ಉದ್ದೇಶದಿಂದ, ಪ್ರಧಾನಿ ನರೇಂದ್ರ ಮೋದಿ ದ್ವೀಪರಾಷ್ಟ್ರ ಮಾರಿಷಸ್ನಲ್ಲಿ ‘ಮಹಾಸಾಗರ್’ ಎಂಬ ಹೊಸ ಪರಿಕಲ್ಪನೆಯನ್ನು ಘೋಷಿಸಿದ್ದಾರೆ. ಈ ಸಂದರ್ಭ ಅವರು, ಕಡಲ ಭದ್ರತೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಎಂಟು ಮಹತ್ವದ ಒಪ್ಪಂದಗಳಿಗೆ ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮಗೂಲಂ ಅವರೊಂದಿಗೆ ಸಹಿ ಹಾಕಿದರು.
ಗ್ಲೋಬಲ್ ಸೌತ್ (ಬೆಳೆಯುತ್ತಿರುವ ರಾಷ್ಟ್ರಗಳು)ನ ಸಮಗ್ರ ಅಭಿವೃದ್ಧಿ ಮತ್ತು ಭದ್ರತೆಯನ್ನು ಉದ್ದೇಶಿಸಿದ ಮಹಾಸಾಗರ್ (ಎಲ್ಲಾ ಕ್ಷೇತ್ರಗಳಲ್ಲಿ ಭದ್ರತೆ ಮತ್ತು ಬೆಳವಣಿಗೆಗಾಗಿ ಪರಸ್ಪರ ಸಮಗ್ರ ಪ್ರಗತಿ – Mutual and Holistic Advancement for Security and Growth Across Regions) ಪರಿಕಲ್ಪನೆಯು ವ್ಯಾಪಾರದ ವೃದ್ಧಿ, ಸುಸ್ಥಿರ ಅಭಿವೃದ್ಧಿಗೆ ಸಾಮರ್ಥ್ಯವರ್ಧನೆ ಮತ್ತು ಭವಿಷ್ಯದ ಭದ್ರತೆಯ ಮೇಲೆ ಗಮನ ಕೆಂದ್ರೀಕರಿಸುತ್ತుందని ಅವರು ಹೇಳಿದರು.
ಈ ಸಂದರ್ಭ, ಮಾರಿಷಸ್ ಅನ್ನು ಭಾರತದ ಪ್ರಮುಖ ಪಾಲುದಾರ ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ, 10 ವರ್ಷಗಳ ಹಿಂದೆ ಭಾರತದ ಸಾಗರ್ (ಎಲ್ಲಾ ಕ್ಷೇತ್ರದ ಭದ್ರತೆ ಮತ್ತು ಬೆಳವಣಿಗೆ) ಚಿಂತನೆಯ ಬುನಾದಿಯನ್ನು ಮಾರಿಷಸ್ನಲ್ಲಿ ಹಾಕಲಾಗಿದ್ದನ್ನು ಸ್ಮರಿಸಿದರು.
8 ಮಹತ್ವದ ಒಪ್ಪಂದಗಳಿಗೆ ಸಹಿ
ಭಾರತವು ಕಡಲ ಭದ್ರತೆ, ವ್ಯಾಪಾರ ಮತ್ತಿತರ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಉತ್ತೇಜನಕ್ಕಾಗಿ ಮಾರಿಷಸ್ನೊಂದಿಗೆ ಎಂಟು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ. ಗಡಿಯಾಚೆಯ ವ್ಯವಹಾರಗಳಲ್ಲಿ ರಾಷ್ಟ್ರೀಯ ಕರೆನ್ಸಿ ಬಳಕೆ, ಕಡಲ ಮಾಹಿತಿಯ ವಿನಿಮಯ, ಅಕ್ರಮ ಹಣ ವರ್ಗಾವಣೆ ತಡೆಗೆ ಜಂಟಿ ಕಾರ್ಯಾಚರಣೆ ಹಾಗೂ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಹಭಾಗಿತ್ವ ವೃದ್ಧಿ ಇವು ಈ ಒಪ್ಪಂದಗಳ ಪ್ರಮುಖ ಅಂಶಗಳಾಗಿವೆ.
ಮೋದಿ ಅವರಿಗೆ ಮಾರಿಷಸ್ನ ಅತ್ಯುನ್ನತ ಗೌರವ
ಪೋರ್ಟ್ ಲೂಯಿಸ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾರಿಷಸ್ನ ಅತ್ಯುನ್ನತ ಗೌರವದಿಂದ ಸನ್ಮಾನಿಸಲಾಯಿತು. ಎರಡು ದಿನಗಳ ಮಾರಿಷಸ್ ಪ್ರವಾಸದ ಕೊನೆ ದಿನವಾದ ಬುಧವಾರ, ಪೋರ್ಟ್ ಲೂಯಿಸ್ನಲ್ಲಿ ನಡೆದ ರಾಷ್ಟ್ರೀಯ ದಿನಾಚರಣೆಯ ವೇಳೆ ಅವರನ್ನು “ದಿ ಗ್ರ್ಯಾಂಡ್ ಕಮಾಂಡ್ ಆಫ್ ದಿ ಸ್ಟಾರ್ ಆ್ಯಂಡ್ ಕೋ ಆಫ್ ದಿ ಇಂಡಿಯನ್ ಓಷಿಯನ್” ಪ್ರಶಸ್ತಿಯಿಂದ ಗೌರವಿಸಲಾಯಿತು. ಈ ಪ್ರತಿಷ್ಠಿತ ಗೌರವ ಸ್ವೀಕರಿಸಿದ ಮೊದಲ ಭಾರತೀಯ ಮತ್ತು ಆರನೇ ವಿದೇಶಿಗ ಎಂಬ ಹೆಗ್ಗಳಿಕೆಯನ್ನು ಮೋದಿ ಪಡೆದಿದ್ದಾರೆ.